Friday 8 July 2016

ಸೋಲಾರ್‌ ಗೋಲ್‌ಮಾಲ್‌: 9 ಇಇಗಳ ಅಮಾನತು

ಬೆಂಗಳೂರು: ಚಾವಣಿ ಸೌರ ವಿದ್ಯುತ್‌ ಉತ್ಪಾದನೆ ಸಂಬಂಧ ಖಾಸಗಿ ವ್ಯಕ್ತಿಗಳೊಂದಿಗೆ ನಡೆದ ವಿದ್ಯುತ್‌ ಖರೀದಿ ಒಪ್ಪಂದಗಳಲ್ಲಿ ವ್ಯಾಪಕ ಅಕ್ರಮ ಬಯಲಾಗಿದೆ. ಈ ಹಿನ್ನೆಲೆಯಲ್ಲಿ, ಎಸ್ಕಾಂನ 9 ಕಾರ್ಯಪಾಲಕ ಎಂಜಿನಿಯರ್‌ಗಳನ್ನು (ಇಇ) ಅಮಾನತುಗೊಳಿಸಲಾಗಿದೆ.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಈ ವಿಷಯ ತಿಳಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ''ಯೂನಿಟ್‌ಗೆ 9.56 ರೂ.ನಷ್ಟು ದುಬಾರಿ ಖರೀದಿ ದರ ನಿಗದಿ ಮಾಡಲಾಗಿತ್ತು. ಬ್ಯಾಂಕ್‌ ಸಾಲದ ಲಭ್ಯತೆ ಹಾಗೂ ಕೇಂದ್ರ
ಸರಕಾರದ ಶೇ.30 ಸಬ್ಸಿಡಿ ದುರುಪಯೋಗ ಹುನ್ನಾರದ ವ್ಯಕ್ತಿಗಳೊಂದಿಗೆ ಎಸ್ಕಾಂ ಎಂಜಿನಿಯರ್‌ಗಳು ಕೈಜೋಡಿಸಿ, ಸರಕಾರ ಹಾಗೂ ಕೆಇಆರ್‌ಸಿ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಶೇ.90ರಷ್ಟು ಒಪ್ಪಂದಗಳು ಅಕ್ರಮ ಎಂಬುದು ಮೇಲ್ನೋಟಕ್ಕೆ ಗೋಚರವಾಗಿದೆ,'' ಎಂದು ಹೇಳಿದರು.
''ಮುಖ್ಯ ಎಂಜಿನಿಯರ್‌ ನೇತೃತ್ವದಲ್ಲಿ ಸಮಿತಿ ರಚಿಸಿ ವಿವರವಾದ ತನಿಖೆಗೆ ಆದೇಶ ನೀಡಲಾಗಿದೆ. ವರದಿ ಆಧರಿಸಿ ಇನ್ನಷ್ಟು ಕಾರ್ಯಪಾಲಕ ಎಂಜಿನಿಯರ್‌ಗಳ ತಲೆದಂಡ ಆಗಲಿದೆ. ನಿಯಮ ಮೀರಿ ನಡೆದಿರುವ ಎಲ್ಲ ಖರೀದಿ ಒಪ್ಪಂದಗಳು ರದ್ದಾಗಲಿವೆ,'' ಎಂದು ತಿಳಿಸಿದರು.
ಅಮಾನತುಗೊಂಡವರು ಯಾರು?
ಬೆಸ್ಕಾಂ ವ್ಯಾಪ್ತಿಯ 4, ಹೆಸ್ಕಾಂ ವ್ಯಾಪ್ತಿಯ ಮೂವರು ಹಾಗೂ ಜೆಸ್ಕಾಂನ ಇಬ್ಬರು ಇಇಗಳು ಅಮಾನತುಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ಎಂ.ಆರ್‌.ರಮೇಶ್‌, ಕೆಜಿಎಫ್‌ನ ಕೆ.ಎಲ್‌.ಲೋಕೇಶ್‌, ಹಿರಿಯೂರಿನ ಬಿ.ವಿ.ಜಗದೀಶ್‌, ಮಧುಗಿರಿಯ ಕೆ.ಎಚ್‌.ಗುರುಸ್ವಾಮಿ, ಹಾವೇರಿಯ ಎಚ್‌.ಕೃಷ್ಣಪ್ಪ, ಬಾಗಲಕೋಟದ ಶಿವಣ್ಣಗೌಡ ಆರ್‌.ಪಾಟೀಲ್‌, ಗದಗದ ಡಿ.ಎಚ್‌.ಉಮೇಶ್‌, ಕೊಪ್ಪಳದ ಡಿ. ಮಹೇಶ್‌ ಹಾಗೂ ಸಿಂಧನೂರಿನ ಬಸಪ್ಪ ಕೆ.ಪಟ್ಟಣ ಶೆಟ್ಟಿ ಅಮಾನತುಗೊಂಡವರು.
ಏನಿದು ಯೋಜನೆ?
ರಾಜ್ಯ ಸರಕಾರದ ಸೋಲಾರ್‌ ನೀತಿ 2014-21ರ ಅಡಿ ಕಟ್ಟಡಗಳ ಚಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್‌ ಉತ್ಪಾದಿಸುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಶಾಲಾ-ಕಾಲೇಜು ಕಟ್ಟಡಗಳು, ಆಸ್ಪತ್ರೆ, ಗೋದಾಮು, ಕೋಳಿ ಫಾರಂ, ಹಾಸ್ಟೆಲ್‌ ಹಾಗೂ ಖಾಸಗಿ ಕಟ್ಟಡಗಳ ಮೇಲೆ ಸೋಲಾರ್‌ ವಿದ್ಯುತ್‌ ಉತ್ಪಾದಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಮೂಲಕ ಉತ್ಪಾದಿಸುವ ವಿದ್ಯುತ್‌ಅನ್ನು ಎಸ್ಕಾಂಗಳು ಖರೀದಿಸಲಿದ್ದು, ಯೂನಿಟ್‌ಗೆ 9.56 ರೂ. ದರವನ್ನು ಕೆಇಆರ್‌ಸಿ ನಿಗದಿ ಮಾಡಿತ್ತು. ಈ ಉದ್ದೇಶಕ್ಕೆ ಬ್ಯಾಂಕ್‌ ಸಾಲ ಸುಲಭವಾಗಿ ಸಿಗುವ ಜತೆಗೆ, ಕೇಂದ್ರ ಸರಕಾರದಿಂದ ಸಹಾಯಧನವೂ ಲಭ್ಯವಿತ್ತು.
ಈ ಯೋಜನೆಯಡಿ ಉತ್ಪಾದಕರೊಂದಿಗೆ ವಿದ್ಯುತ್‌ ಖರೀದಿ ಒಪ್ಪಂದ ಮಾಡಿಕೊಳ್ಳಲು ಎಸ್ಕಾಂಗಳ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಅಧಿಕಾರ ನೀಡಲಾಗಿತ್ತು. ಈ ಯೋಜನೆಯಡಿ ಒಟ್ಟು 5,631 ಅರ್ಜಿಗಳು ಸಲ್ಲಿಕೆಯಾಗಿ, 1,566 ಮೆ.ವ್ಯಾ ಉತ್ಪಾದನೆ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಒಟ್ಟು 3,494 ಖರೀದಿ ಒಪ್ಪಂದಗಳು ನಡೆದಿದ್ದವು.
ಮಾನದಂಡ ಏನಿತ್ತು?
ಸೌರ ವಿದ್ಯುತ್‌ ಉತ್ಪಾದನೆಗೆ ಯೋಗ್ಯವಾದ ಚಾವಣಿ ಹೊಂದಿದ ಕಟ್ಟಡ ಇರಬೇಕು. ಆ ಕಟ್ಟಡಕ್ಕೆ ಆರ್‌.ಆರ್‌. ನಂಬರ್‌ ಇರಬೇಕು. 500 ಕಿ.ವ್ಯಾ.ವರೆಗೆ ಮಾತ್ರ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಖರೀದಿ ಒಪ್ಪಂದ ಮಾಡಿಕೊಳ್ಳಬಹುದಾಗಿದ್ದು, ಹೆಚ್ಚಿನ ಸಾಮರ್ಥ್ಯ‌ದ ಘಟಕವಾದರೆ ಕೆಇಆರ್‌ಸಿ ಮುಂದೆ ಹೋಗಬೇಕು. ಉತ್ಪಾದನಾ ಘಟಕವು 11 ಕೆ.ವಿ. ಜಾಲಕ್ಕೆ ಸಂಪರ್ಕಿಸುವಂತಿರಬೇಕು. ಒಪ್ಪಂದಗಳಿಗೆ ಮೇ 2 ಕೊನೆಯ ದಿನವಾಗಿತ್ತು.
ಬಾಕ್ಸ್‌
ಅಕ್ರಮ ಹೇಗೆ?
''ಬಹಳಷ್ಟು ಪ್ರಕರಣಗಳಲ್ಲಿ ಚಾವಣಿಯೂ ಇಲ್ಲ, ಕಟ್ಟಡವೂ ಇಲ್ಲ. ಪ್ರಸ್ತಾಪ ತಂದವರ ಭೂಮಿಯೂ ಇಲ್ಲ. ಖಾಲಿ ಜಾಗಗಳನ್ನೂ ತೋರಿಸಿ ಒಪ್ಪಂದ ನಡೆದಿವೆ. ಆರ್‌.ಆರ್‌.ನಂಬರ್‌ ಇಲ್ಲದೆಯೂ ಒಪ್ಪಂದಗಳು ನಡೆದಿದ್ದು, ಇನ್ನೂ ಕೆಲವು ಪ್ರಕರಣಗಳಲ್ಲಿ ಕೃಷಿ ಪಂಪ್‌ಸೆಟ್‌ ಆರ್‌.ಆರ್‌ ನಂಬರ್‌ ತೋರಿಸಲಾಗಿದೆ. 11 ಕೆ.ವಿ ಜಾಲದ ಬದಲಿಗೆ 110/66 ಕೆವಿ ಸಬ್‌ ಸ್ಟೇಷನ್‌ಗಳಿಗೆ ಸಂಪರ್ಕ ತೋರಿಸಲಾಗಿದೆ. ಡಿಸೆಂಬರ್‌ 10, 2015ರ ಆದೇಶ ಹಿಂಪಡೆದ ಬಳಿಕವೂ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ,'' ಎಂದು ಸಚಿವರು ವಿವರಿಸಿದರು.
''ಇ.ಇ ಗಳು 500 ಮೆ.ವ್ಯಾ.ವರೆಗೆ ಮಾತ್ರ ಖರೀದಿ ಒಪ್ಪಂದಕ್ಕೆ ಸಹಿ ಮಾಡಲು ಅಧಿಕಾರವಿರುವ ಹಿನ್ನೆಲೆಯಲ್ಲಿ ಪ್ರಸ್ತಾವನೆಗಳನ್ನು ಹಲವು ಭಾಗಗಳಾಗಿ ಪ್ರತ್ಯೇಕಿಸಿ ಒಪ್ಪಂದ ಮಾಡಲಾಗಿದೆ. ಹಲವು ಒಪ್ಪಂದಗಳಿಗೆ ಒಂದೇ ದಿನ ಸಹಿ ಹಾಕಿರುವುದನ್ನು ನೋಡಿದರೆ ಸ್ಥಳ ಪರಿಶೀಲನೆಯೂ ಆಗಿಲ್ಲ. ಈ ಎಲ್ಲವೂ ಯೋಜನೆಯ ಉದ್ದೇಶ, ಗುರಿ ಹಾಗೂ ಒಟ್ಟಾರೆ ಆಶಯಕ್ಕೆ ವಿರುದ್ಧವಾಗಿ ನಡೆದಿವೆ,'' ಎಂದು ಅವರು ತಿಳಿಸಿದರು.


No comments:

Post a Comment