Thursday 7 July 2016

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮರುಜೀವ;ಕಾನೂನು ಸಲಹೆ ಕೇಳಿದ ಕೇಂದ್ರ

  ನವದೆಹಲಿ: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ವಿಚಾರದ ಬಗ್ಗೆ ಪರಿಶೀಲನೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾನೂನು ಆಯೋಗಕ್ಕೆ ಪತ್ರ ಬರೆದಿದ್ದ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ರಾಜಕೀಯ ಪಾಳಯದಲ್ಲಿ ಬಿಸಿ, ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.ಅತ್ಯಂತ ಕಠಿಣ ಹಾದಿಯ ಏಕರೂಪ ಸಂಹಿತೆ ಜಾರಿ ಬಗ್ಗೆ ಮೊದಲ ಬಾರಿಗೆ ಕೇಂದ್ರ ಸರ್ಕಾರ ಆಯೋಗದ ಸಲಹೆ ಕೇಳಿದೆ. ಈ ವಿಚಾರದಲ್ಲಿ ಈಗಾಗಲೇ
ರಾಜಕೀಯವಾಗಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಏಕರೂಪ ನಾಗರಿಕ ಸಂಹಿತೆ ಜಾರಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಕೂಡಾ ನೀಡಿತ್ತು.

ಆ ನಿಟ್ಟಿನಲ್ಲಿ ದೇಶದ ಎಲ್ಲಾ ನಾಗರಿಕರು ಒಂದೇ ಕಾನೂನಿನ ಅಡಿಯಲ್ಲಿ ಬರಬೇಕೆಂಬುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ. ಉದಾಹರಣೆಗೆ, ಹಿಂದೂ ಮತ್ತು ಮುಸ್ಲಿಮರಲ್ಲಿ ಹಲವಾರು ಪರ್ಸನಲ್ ಕಾಯ್ದೆಗಳಿವೆ. ಪರ್ಸನಲ್ ಕಾಯ್ದೆಯಲ್ಲಿ ಆಸ್ತಿ, ಮದುವೆ ಮತ್ತು ವಿಚ್ಛೇದನ ಕೂಡಾ ಸೇರಿದೆ.

ಜಾತ್ಯತೀತ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಹೇರಿಕೆ ಸರಿಯಲ್ಲ ಎಂದು ವಿವಿಧ ರಾಜಕೀಯ ಪಕ್ಷಗಳು, ಬುದ್ದಿಜೀವಿಗಳು, ಜಾತ್ಯತೀತ ನಿಲುವುಳ್ಳವರು ಪ್ರತಿಪಾದಿಸಿದ್ದಾರೆ.

ಅಲ್ಲದೇ ರಾಷ್ಟ್ರೀಯ ಏಕತೆಗೆ ಏಕರೂಪ ನಾಗರಿಕ ಸಂಹಿತೆ ಅವಶ್ಯಕ ಎಂದು ಕೇಂದ್ರ ಕಾನೂನು ಸಚಿವ ಡಿವಿ ಸದಾನಂದ ಗೌಡ ಈ ಹಿಂದೆ ಪ್ರತಿಪಾದಿಸಿದ್ದರು. ಆದರೆ ಇದು ಅತ್ಯಂತ ಸೂಕ್ಷ್ಮವಾದ ರಾಷ್ಟ್ರೀಯ ವಿಚಾರವಾಗಿದೆ. ಆತುರವಾಗಿ ಸಂಹಿತೆ ಜಾರಿ ಮಾಡಲು ಸಾಧ್ಯವಿಲ್ಲ. ಜಾರಿಗೂ ಮುನ್ನ ವ್ಯಾಪಕ ಚರ್ಚೆ ಮತ್ತು ಸಮಾಲೋಚನೆಯ ಅಗತ್ಯವಿದೆ ಎಂದು ಹೇಳಿದ್ದರು



No comments:

Post a Comment